ಯಕ್ಷಗಾನ ಇತಿಹಾಸದಲ್ಲೇ ವಿನೂತನ ಪ್ರಯೋಗ : ಎನಿಮೇಶನ್ ತಂತ್ರಜ್ಞಾನದಲ್ಲಿ ಚೀತ್ರೀಕರಿಸಲ್ಪಟ್ಟ ಪ್ರಥಮ ಯಕ್ಷಗಾನ – ‘ಶ್ರೀ ಹರಿಮಾಯೆ’
ಲೇಖಕರು : ಕೃಷ್ಣ.ಎನ್. ಅಜೆಕಾರು
ಸೋಮವಾರ, ಜುಲೈ 1 , 2013
|
ಇಂದಿನ ವೇಗದ ಯುಗದಲ್ಲಿ ಏನಿದ್ದರೂ ತಂತ್ರಜ್ಞಾನದ್ದೇ ಕಾರುಬಾರು.ಮುಖ್ಯವಾಗಿ ಇಂದು ಕಲಾರಂಗದಲ್ಲಿ ಅನಿಮೇಶನ್ ಹಾಗೂ ಗ್ರಾಫಿಕ್ಸ್ ತಂತ್ರಜ್ಞಾನವು ಹೇರಳವಾಗಿ ಬಳಸಲಾಗುತ್ತಿದೆ.ವಿದೇಶಗಳಲ್ಲಿ ಇಂಗ್ಲೀಷ್ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದ ಅನಿಮೇಶನ್ ಹಾಗೂ ಗ್ರಾಫಿಕ್ಸ್ ತಂತ್ರಜ್ಞಾನ ಈಗ ಕನ್ನಡ ಚಿತ್ರರಂಗದಲ್ಲೂ ಬಳಕೆಯಾಗುತ್ತಿದ್ದು,ಈ ನಿಟ್ಟಿನಲ್ಲಿ ಕರಾವಳಿಯ ಗಂಡು ಮೆಟ್ಟಿದ ಕಲೆ ಎಂದೇ ಹೆಸರುವಾಸಿಯಾಗಿರುವ ಯಕ್ಷಗಾನ ಕಲೆಯಲ್ಲೂ ಅನಿಮೇಶನ್ ತಂತ್ರಜ್ಞಾನ ಬಳಕೆಯಾದರೆ ಹೇಗಿರಬಹುದು.ಇಂತಹ ಒಂದು ಮಹತ್ವದ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದವರು ಯಕ್ಷಗಾನ ಕಲಾವಿದ ಮುಂಬೈನ ಕಟೀಲು ಸದಾನಂದ ಶೆಟ್ಟಿ.
ಯಕ್ಷಗಾನ ಕಲೆಯು ಕರಾವಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.ಸುಮಾರು 80ರ ದಶಕದಲ್ಲಿ ಪೌರಾಣಿಕ ಕಥಾಹಂದರಗಳ ಪ್ರಸಂಗಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದವು,ಬಳಿಕ ಕಾಲಕ್ಕೆ ತಕ್ಕಂತೆ ಯಕ್ಷಗಾನ ರಂಗದಲ್ಲೂ ಜನರ ಅಭಿರುಚಿಗೆ ತಕ್ಕಂತೆ ಇಂದು ಸಮಾಜಿಕ ಕಥಾನಕಗಳ ಪ್ರಯೋಗಗಳನ್ನು ಮಾಡಿದರೂ ಟೆಂಟ್ನಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಯಕ್ಷಗಾನ ನೋಡುವವರ ಸಂಖ್ಯೆ ಕಡಿಮೆಯಾಗಿದೆ.ಇಂದು ಮನೋರಂಜನೆಗೆ ಮನೆಮನೆಯಲ್ಲೂ ಟಿವಿಗಳಿವೆ.
ಜನರಿಗೆ ಧಾರವಾಹಿ,ರಿಯಾಲಿಟಿ ಶೋಗಳಲ್ಲಿ ಆಸಕ್ತಿ ಹೆಚ್ಚಿದ್ದು,ಯಕ್ಷಗಾನವು ಇವುಗಳ ಮುಂದೆ ಮಂಕಾಗಿದೆ.ಯಕ್ಷಗಾನವನ್ನು ಇಂದಿನ ಮಕ್ಕಳಿಗೆ ಹಾಗೂ ಈ ಕಲೆಯ ಮಹತ್ವವನ್ನು ವಿದೇಶಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸದಾನಂದ ಶೆಟ್ಟಿಯವರು ಶ್ರೀಹರಿಮಾಯೆ ಎಂಬ ಸುಮಾರು 65 ನಿಮಿಷದ ಪೌರಾಣಿಕ ಕಥಾಭಾಗವನ್ನು ಸಂಪೂರ್ಣವಾಗಿ ಅನಿಮೇಶನ್ ಹಾಗೂ ಗಾಫಿಕ್ಸ್ ತಂತ್ರಜ್ಞಾನದೊಂದಿಗೆ ಚಿತ್ರೀಕರಿಸಿ ಯಕ್ಷಗಾನ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಮೂಲತಃ ಮಂಗಳೂರು ಜಿಲ್ಲೆಯ ಕಟೀಲಿನವರಾದ ಸದಾನಂದ ಶೆಟ್ಟಿಯವರು ಕಳೆದ 31 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ,ಯಕ್ಷಗಾನ ತರಬೇತುದಾರರಾಗಿ ಯಕ್ಷಗಾನ ಕಲೆಯನ್ನು ಬೆಳೆಸಿದ್ದಾರೆ.ಮುಂಬೈನಲ್ಲಿ ಉದ್ಯೋಗವನ್ನು ಮಾಡಿಕೊಂಡಿರುವ ಕಟೀಲು ಸದಾನಂದ ಶೆಟ್ಟಿಯವರು ಮುಳುಂಡ್ನಲ್ಲಿ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಎಂಬ ಯಕ್ಷಗಾನ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿ,ಸುಮಾರು ೧ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ 400 ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿರುವುದಲ್ಲದೇ 19 ವಿವಿಧ ಸಂಸ್ಥೆಗಳಿಗೆ ಯಕ್ಷಗಾನ ತರಬೇತಿ ನೀಡಿದ್ದು, 98 ಯಕ್ಷಗಾನಗಳನ್ನು ನಿರ್ದೇಶಿಸಿ ಪ್ರದರ್ಶನ ನೀಡಿದ್ದಾರೆ.
ಯಕ್ಷಗಾನದ ಕಥಾ ಪ್ರಸಂಗಗಳಲ್ಲಿ ಕಲಾವಿದ ವೇದಿಕೆಯಲ್ಲಿ ಪಾತ್ರದ ಸನ್ನಿವೇಶವನ್ನು ಮನಸ್ಸಿನಲ್ಲಿ ಕಲ್ಪಿಸಿ ಅಭಿನಯಿಸುವುದಕ್ಕಿಂತ ಆ ಪಾತ್ರಕ್ಕೆ ತಕ್ಕಂತೆ ಸನ್ನಿವೇಶವನ್ನು ಸೃಷ್ಟಿಸಿ ಅಭಿನಯಿಸಿದರೆ ಮಕ್ಕಳಿಗೂ ಸುಲಭವಾಗಿ ಅರ್ಥವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸದಾನಂದ ಶೆಟ್ಟಿಯವರು ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಭಸ್ಮಾಸುರ ಮೋಹಿನಿ ಎಂಬ ಪೌರಾಣಿಕ ಕಥಾನಕದ ಕೆಲವು ಆಯ್ದ ಭಾಗಗಳನ್ನು ಪಡೆದುಕೊಂಡು ‘ಶ್ರೀಹರಿ ಮಾಯೆ’ ಎಂಬ ನೂತನ ಕಥಾನಕವನ್ನು ರಚಿಸಿ ಮಂಗಳೂರಿನ ಇಮ್ಯಾಜಿನೇಷನ್ ಮೂವೀಸ್ ಲಾಂಛನದಲ್ಲಿ ಚಿತ್ರೀಕರಿಸಿ ಹೊರತಂದಿದ್ದಾರೆ.ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಸಂಸ್ಥೆಯಿಂದ ತರಬೇತಿ ಪಡೆದ ೯ನೇ ತರಗತಿಯ ಶಾಲಾ ಮಕ್ಕಳನ್ನು ಈ ಯಕ್ಷಗಾನಕ್ಕೆ ಬಳಸಿಕೊಂಡಿರುವ ಸದಾನಂದ ಶೆಟ್ಟಿಯವರು ಸಂಪೂರ್ಣವಾಗಿ ಬಾಲಕಲಾವಿದರನ್ನು ಸೇರಿಸಿಕೊಂಡು ಯಕಗ್ಷಾನವನ್ನು ಚಿತ್ರೀಕರಿಸಿದ ದಾಖಲೆಗೂ ಪಾತ್ರರಾಗಿದ್ದಾರೆ.
ಯಕ್ಷಗಾನ ಚಿತ್ರೀಕರಣಕ್ಕಾಗಿ ಸುಮಾರು ಒಂದೂವರೆ ತಿಂಗಳ ಸಮಯಾವಕಾಶ ತಗುಲಿದ್ದು,ಬಳಿಕ ಯಕ್ಷಗಾನ ಸಿಡಿಯನ್ನು ಮಂಗಳೂರಿನ ಇಮ್ಯಾಜಿನೇಷನ್ ಮೂವೀಸ್ ಸಂಸ್ಥೆಯವರು ಪಡೆದು ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕ್ರೋಮಾ ಕೀಯಿಂಗ್,ಆಟೋ ಡೆಸ್ಕ್ ಮಾಯಾ,ವಿಶುವಲ್ ಎಫೆಕ್ಟ್,ಆಡೋಬ್ ಪ್ರೀಮಿಯರ್ ತಂತ್ರಾಶಗಳನ್ನು ಬಳಸಿ ಸುಮಾರು 5 ತಿಂಗಳುಗಳಲ್ಲಿ ಬಹಳ ನಾಜೂಕಿನಿಂದ ಗ್ರಾಫಿಕ್ಸ್ ಹಾಗೂ ಎನಿಮೇಶನ್ ಒಳಗೊಂಡ ಯಕ್ಷಗಾನವನ್ನು ಹೊರತಂದಿದ್ದಾರೆ.ಯಕ್ಷಗಾನದಲ್ಲಿ ಶ್ರೀಹರಿಯು ಶೇಷಶಯನದಲ್ಲಿ ಪವಡಿಸುವ ದೃಶ್ಯ,ಭಸ್ಮಾಸುರನ ರುದ್ರತಾಂಡವ ದೃಶ್ಯ,ಮೋಹಿನಯ ಶಾಪ ಹೀಗೆ ಎಲ್ಲವನ್ನೂ ಅಧ್ಬುತವಾಗಿ ಅಳವಡಿಸುವಲ್ಲಿ ಸದಾನಂದ ಶೆಟ್ಟಿಯವರ ಸೋದರಳಿಯ ಕಾರಂಜಿ ಇನ್ಫೋಟೆಕ್ನ ಉದ್ಯೋಗಿ ಸಂತೋಷ್ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಶೃತಿ.ವಿ.ತಾಳಿತ್ತಾಯ,ವಿಕಾಸ್ ಆಂಬ್ಲಮೊಗರು,ಪ್ರದೀಪ್ ರೋಯ್,ನಾಗೇಶ್ ಪುತ್ತೂರು ಮತ್ತಿತರ ನುರಿತ ತಂತ್ರಜ್ಞರ ತಂಡ ಅಪಾರ ಪರಿಶ್ರಮ ಅಡಗಿದೆ.
ಯಕ್ಷಗಾನವನ್ನು ವಿದೇಶಿಗರಿಗೂ ಪರಿಚಯಿಸುವುದೇ ನನ್ನ ಪ್ರಥಮ ಗುರಿ – ಸದಾನಂದ ಶೆಟ್ಟಿ
ಯಕ್ಷಗಾನ ಪಾತ್ರಗಳ ಸನ್ನಿವೇಶಕ್ಕೆ ತಕ್ಕಂತೆ ನೈಜತೆಯನ್ನು ತುಂಬಿಸಿ ಪ್ರದರ್ಶಿಸಿದರೆ ಮಕ್ಕಳಿಗೆ ಅದರಲ್ಲೂ ಮುಖ್ಯವಾಗಿ ವಿದೇಶಿಗರಿಗೆ ಯಕ್ಷಗಾನದ ಬಗ್ಗೆ ಸ್ಪಷ್ಟ ತಿಳುವಳಿಕೆ ಮಾಡುತ್ತದೆ.ಈ ನಿಟ್ಟಿನಲ್ಲಿ ತಾನು ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಬಳಸಿರುವುದು.ಯಕ್ಷಗಾನವನ್ನು ಮುಂದಿನ ಪರಪಂಪರೆಗೆ ಪರಿಚಯಿಸಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ 3.60 ಲಕ್ಷರೂ ವೆಚ್ಚದಲ್ಲಿ ಈ ಯೋಜನೆ ತಯಾರಿಸಿದ್ದು,ಇದನ್ನು ವ್ಯವಹಾರಿಕ ದೃಷ್ಟಿಯಲ್ಲಿ ತೆಗೆದುಕೊಂಡಿಲ್ಲ.ಈಗಾಗಲೇ ಮುಂಬೈನಲ್ಲಿ ಯಕ್ಷಗಾನ ಸಿಡಿಯನ್ನು ಸರಳವಾಗಿ ಬಿಡುಗಡೆಗೊಳಿಸಿದ್ದು,ಕೆಲವು ಪ್ರಾಯೋಜಕರ ನೆರವಿನಿಂದ ಹೂಡಿಕೆಯ ಶೇ 75 ರಷ್ಟು ಹಣ ಬಂದಿದ್ದು,ಮುಂದಿನ ದಿನಗಳಲ್ಲಿ ಸಂಪೂರ್ಣ 3 ಗಂಟೆ ಅವಧಿಯ ಮಹಿಷಮರ್ದಿನಿ ಹಾಗೂ ಕೃಷ್ಣಲೀಲೆ ಎಂಬ ಕಥಾಭಾಗವನ್ನು ಸಂಪೂರ್ಣವಾಗಿ ಇದೇ ತಂತ್ರಜ್ಞಾನ ಬಳಸಿ ಹೊರತರಲಾಗುವುದೆಂದು ಕಟೀಲು ಸದಾನಂದ ಶೆಟ್ಟಿ ಹೇಳಿದ್ದಾರೆ.
ನಶಿಸುತ್ತಿರುವ ಯಕ್ಷಗಾನವನ್ನು ಉಳಿಸುವಲ್ಲಿ ತಂತ್ರಜ್ಞಾನದೊಂದಿಗೆ ಆಧುನಿಕ ಗೆಟಪ್ನಲ್ಲಿ ಮೂಡಿಬರುವಂತೆ ಮಾಡಿರುವ ಕಟೀಲು ಸದಾನಂದ ಶೆಟ್ಟಿ ಹಾಗೂ ತಾಂತ್ರಿಕವಾಗಿ ಕೆಲಸ ಮಾಡಿರುವ ಇಮ್ಯಾಜಿನೇಷನ್ ಮೂವೀಸ್ ತಂತ್ರಜ್ಞರ ಸಾಧನೆ ನಿಜಕ್ಕೂ ಶ್ಲಾಘನೀಯ.
ಕೃಪೆ : http://gulfkannadiga.com
|
|
|